ಆಪರೇಷನ್ ಸಿಂಧೂರ್ ಬಗ್ಗೆ ವಿಶೇಷ ಅಧಿವೇಶನ ಕರೆಯದ ಸರ್ಕಾರ; ಕಾಂಗ್ರೆಸ್ ಅಸಮಾಧಾನ

0
bjp- congress Flag

ಬೆಂಗಳೂರು: ದೇಶದಾದ್ಯಂತ 20 ನಗರಗಳಲ್ಲಿ ಜೈ ಹಿಂದ್ ಸಭಾ ಮೂಲಕ ಮಾಜಿ ಸೈನಿಕರಿಗೆ ನಮನ ಸಲ್ಲಿಸಲು ಎಐಸಿಸಿ ನಿರ್ದೇಶನ ನೀಡಿತ್ತು. ಇದು ರಾಜಕೀಯ ಕಾರ್ಯಕ್ರಮವಲ್ಲ. ಇದು ಕಾಂಗ್ರೆಸ್ ಪಕ್ಷದ ಭಾವನಾತ್ಮಕ ಕಾರ್ಯಕ್ರಮವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ.

ಟೌನ್ ಹಾಲ್ ನಲ್ಲಿ ನಡೆದ ಜೈ ಹಿಂದ್ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್ ದಾಳಿಯಲ್ಲಿ ಕನ್ನಡಿಗರು ಹಾಗೂ ಕೇರಳದ ಪ್ರಜೆಗಳು ಹತರಾಗಿದ್ದರು. ಪ್ರವಾಸಿಗರ ಹೆಸರು ಕೇಳಿ ಹತ್ಯೆ ಮಾಡಿರುವುದು ನಮ್ಮ ದೇಶದಲ್ಲಿ ಕೋಮು ವಿಭಜನೆ ಮಾಡುವ ಪ್ರಯತ್ನ ನಡೆದಿರುವುದು ಸ್ಪಷ್ಟವಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಭಾರತ ಜಾತಿ, ಧರ್ಮ, ಭಾಷೆ ಮೀರಿ ಒಟ್ಟಾಗಿ ನಮ್ಮ ಸೇನಾ ಪಡೆಗಳ ಜತೆ ನಿಂತಿದ್ದು ನಮಗೆ ಹೆಮ್ಮೆಯ ವಿಚಾರ ಎಂದರು.

ದಾಳಿಯಾದ 24 ತಾಸುಗಳಲ್ಲಿ ಕಾಂಗ್ರೆಸ್ ಅದ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ರಾಹುಲ್ ಗಾಂಧಿ ವರ ಉಪಸ್ಥಿತಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆ ಪರವಾಗಿ ನಿಲ್ಲುವ ನಿರ್ಣಯ ಕೈಗೊಂಡಿತು. ನಮ್ಮ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ದೇಶದ ಹಿತಾಸಕ್ತಿ ವಿಚಾರ ಬಂದಾಗ ಕಾಂಗ್ರೆಸ್ ಪಕ್ಷ ಎಲ್ಲದಕ್ಕಿಂತ ಹೆಚ್ಚಾಗಿ ದೇಶದ ಪರವಾಗಿ ನಿಲ್ಲುತ್ತದೆ. ದೇಶಕ್ಕೆ ಆಪತ್ತು ಬಂದಾಗೆಲ್ಲಾ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ದೇಶದ ಪರ ನಿಲ್ಲುತ್ತದೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸ, ಪರಂಪರೆ ಎಂದರು.

ಈ ವಿಚಾರವಾಗಿ ವಿಶೇಷ ಅಧಿವೇಶನ ನಡೆಸುವಂತೆ ನಾವು ಆಗ್ರಹಿಸಿದೆವು. ಆಮೂಲಕ ಭಾರತೀಯ ಸಂಸತ್ತು ಈ ವಿಚಾರದಲ್ಲಿ ಒಗ್ಗಟ್ಟಾಗಿದೆ ಎಂದು ತೋರಿಸಲು ನಾವು ಈ ಬೇಡಿಕೆ ಇಟ್ಟೆವು. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ. ಆದರೆ ಅಧಿವೇಶನ ಕರೆಯಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. 2008ರಲ್ಲಿ ಮುಂಬೈ ದಾಳಿಯಾದಾಗ ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಮಾಡಿದವು. ಸರ್ಕಾರವನ್ನು ಪ್ರಶ್ನಿಸಿದವು, ಸರ್ಕಾರದ ವಿರುದ್ಧ ಜಾಹೀರಾತು ಪ್ರಕಟಿಸಿದವು. ಆದರೆ ನಾವು ಆ ರೀತಿ ಮಾಡಲಿಲ್ಲ. ಆಮೂಲಕ ಭಾರತ ಒಗ್ಗಟ್ಟಾಗಿದೆ ಎಂಬ ಸಂದೇಶ ರವಾನಿಸಿದೆವು ಎಂದವರು ನೆನಪಿಸಿದರು.

Leave a Reply

Your email address will not be published. Required fields are marked *

You may have missed