ಮೈಕ್ರೋ ಫೈನಾನ್ಸ್ ಕಿರುಕುಳ: ರೈತರ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದ ಅಶೋಕ್

0
R.Ashok

ಬೆಂಗಳೂರು: ರಾಜ್ಯದ 31.28 ಲಕ್ಷ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯತ್ವದಿಂದ ವಂಚಿತರಾಗಿದ್ದು, ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲದ ಸುಳಿಯಲ್ಲಿ ಸಿಲುಕಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತವೇ ಕಾರಣವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರು ಇಲಾಖೆಯ ಕೆಲಸ ಮಾಡುತ್ತಿದ್ದಾರೋ ಇಲ್ಲ ಬರೀ ಬಣ ರಾಜಕೀಯದಲ್ಲಿ ಕಾಲ ಕಳೆಯುತ್ತಿದ್ದಾರೋ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಆಯಾ ಸೊಸೈಟಿಗಳ ವ್ಯಾಪ್ತಿಗೆ ಒಳಪಡುವ ರೈತರಿಗೆ ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಕಡ್ಡಾಯವಾಗಿ ಸದಸ್ಯತ್ವ ನೀಡಬೇಕು ಎಂಬ ನಿಯಮವಿದ್ದರೂ ಅದು ಯಾಕೆ ಪಾಲನೆ ಆಗುತ್ತಿಲ್ಲ? ರಾಜ್ಯ 86.81 ಲಕ್ಷ ರೈತರ ಪೈಕಿ 31.28 ಲಕ್ಷ ರೈತರಿಗೆ ಸೊಸೈಟಿ ಸದಸ್ಯತ್ವ ಯಾಕೆ ಸಿಕ್ಕಿಲ್ಲ? 2024-25 ನೇ ಸಾಲಿನಲ್ಲಿ 27,000 ಕೋಟಿ ಸಾಲ ವಿತರಿಸುತ್ತೇವೆ ಎಂದು ಹೇಳಿ ಈಗ ಕೇವಲ 17,717 ಕೋಟಿ ಸಾಲ ವಿತರಣೆ ಆಗಿದೆಯಲ್ಲ, ರೈತರಿಗೆ ಸಾಲ ಕೊಡಲು ಸರ್ಕಾರದ ಬಳಿ ದುಡ್ಡಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯತ್ವ ಸಿಕ್ಕಿದ್ದಿದ್ದರೆ 3 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ ಸಾಲ ಸಿಗುತ್ತಿತ್ತು, ಮೈಕ್ರೋ ಫೈನಾನ್ಸ್ ಕಂಪನಿಗಳ ಬಳಿ ಸಾಲದ ಮೊರೆ ಹೋಗುವ ಅನಿವಾರ್ಯತೆ ತಪ್ಪುತ್ತಿತ್ತು ಎಂದಿರುವ ಅಶೋಕ್, ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಪ್ರಾಣ ಕಳೆದುಕೊಳ್ಳುತ್ತಿರುವ ರೈತರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *