‘ಪ್ರೀತಿಯ ರಾಯಭಾರಿ ಇನ್ನಿಲ್ಲ; ಬ್ಯಾಂಕಿಂಗ್ ದಿಗ್ಗಜ ಜಯರಾಂ ಭಟ್ ನಿಧನಕ್ಕೆ ಗಣ್ಯರ ಕಂಬನಿ

ಬೆಂಗಳೂರು: ಕರ್ನಾಟಕ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೊಳಲಿ ಜಯರಾಂ ಭಟ್ ನಿಧನ ಬಗ್ಗೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ದುಃಖ ವ್ಯಕ್ತಪಡಿಸಿದ್ದಾರೆ.‌ ಈ ಬಗ್ಗೆ ಟ್ವೀಟ್ ಮಾಡಿರುವ ಶೋಭಾ ಕರಾಂದ್ಲಾಜೆ,
ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ಸದಸ್ಯರಿಗೆ ಭಗವಂತ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಇದೇ ವೇಳೆ, ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್ ಕೂಡಾ ಶೋಕ ವ್ಯಕ್ತಪಡಿಸಿದ್ದಾರೆ.‌ ಸರಳ ಸಜ್ಜನಿಕೆ, ನಿಷ್ಕಲ್ಮಶ ಹೃದಯದ ಹೃದಯವಂತರಾಗಿದ್ದ, ಕರ್ಣಾಟಕ ಬ್ಯಾಂಕ್ ಮಾಜಿ ಎಂಡಿ ಜಯರಾಮ್ ಭಟ್ ಅವರು ಪ್ರೀತಿಯ ರಾಯಭಾರಿಯಂತಿದ್ದರು ಎಂದು ಅವರು ಬಣ್ಣಿಸಿದ್ದಾರೆ. ಜಯರಾಂ ಭಟ್ ಅವರ ಅಕಾಲಿಕ ನಿಧನ ನಮಗೆ ದಿಗ್ಬ್ರಮೆ ಮೂಡಿಸಿದೆ. ಅವರ ನಡೆ, ನುಡಿ ಎಲ್ಲರಿಗೂ ಮಾದರಿ..ಬ್ಯಾಂಕಿಂಗ್ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ‌. ಕರ್ಣಾಟಕ ಬ್ಯಾಂಕ್ ಚೇರ್ಮನ್ ಆಗಿದ್ದಾಗ ಅವರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಸಾಧಾರಣ. ಇವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ. ಅವರಿಗೆ ದೇವರು ಸದ್ಗತಿ ಕರುಣಿಸಲಿ ಮತ್ತು ದುಃಖತಪ್ತ ಕುಟುಂಬ ಸದಸ್ಯರಿಗೆ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪದ್ಮರಾಜ್ ಪ್ರಾರ್ಥಿಸಿದ್ದಾರೆ.

ಇದೇ ವೇಳೆ, ಕರ್ಣಾಟಕ ಬ್ಯಾಂಕ್ ಅನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಹೊಂದಿದ್ದ ಜಯರಾಮ್ ಭಟ್ ಅವರು ಅಗಲಿದ್ದು ಅಪಾರ ನಷ್ಟವನ್ನು ಉಂಟುಮಾಡಿದೆ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶೋಕ ಹಂಚಿಕೊಂಡಿದ್ದಾರೆ.