ಚುನಾವಣಾ ರಣವ್ಯೂಹ ತಯಾರಿ; ಬಿಜೆಪಿಯ 4 ರಥಗಳಿಗೆ ಪೂಜೆ, ಬೀಳ್ಕೊಡುಗೆ

0
bjp-ratha-yatra1

ಬೆಂಗಳೂರು: ರಾಜ್ಯದಾದ್ಯಂತ ತೆರಳಲಿರುವ ಬಿಜೆಪಿಯ 4 ರಥಗಳಿಗೆ ಇಂದು ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಕರ್ನಾಟಕದ ಚುನಾವಣಾ ಸಹ ಉಸ್ತುವಾರಿ ಕೆ ಅಣ್ಣಾಮಲೈ, ರಾಜ್ಯದ ಕಂದಾಯ ಸಚಿವ ಆರ್ ಅಶೋಕ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಸಿದ್ದರಾಜು ಹಾಗೂ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ಸೇರಿದಂತೆ ಪಕ್ಷದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಜನರು ರಥವನ್ನು ಕುತೂಹಲದಿಂದ ವೀಕ್ಷಿಸಿದರು. ಈ ರಥಗಳು ಒಟ್ಟು 4 ಕೋಟಿ ಜನರನ್ನು ತಲುಪುವ ಉದ್ದೇಶ ಹೊಂದಿದ್ದು, ಪಕ್ಷ ಬಹುಮತ ಪಡೆಯಲು ಇದು ಪೂರಕವಾಗಲಿದೆ. ಪ್ರತಿ ರಥವು 30 ಅಡಿ ಉದ್ದ, 8 ಅಡಿ ಅಗಲದ್ದಾಗಿದೆ. ರಥದಲ್ಲಿ ನಿಂತು ಭಾಷಣ ಮಾಡಲು ಸುಂದರ ಕೆನೊಪಿ ರಚಿಸಿದ್ದೇವೆ. 4 ಮೊಬೈಲ್ ಚಾರ್ಜರ್‍ಗಳು, ರೋಡ್ ಷೋಗೆ ಪೂರಕ ಮೈಕ್ ವ್ಯವಸ್ಥೆ ಇದ್ದು, ಸುಮಾರು ಒಂದು ಕಿಮೀ ದೂರಕ್ಕೆ ಕೇಳಿಸುವಷ್ಟು ಪ್ರಬಲವಾಗಿದೆ. ಕೆನೊಪಿ ಮೇಲೆ 4 ಬಿಗ್ ಹಾರನ್ ಇದೆ ಎಂದು ಪಕ್ಷದ ಪ್ರಮುಖರು ತಿಳಿಸಿದರು.

ಈ ಬಸ್ ಒಳಗಡೆ 7 ಸೀಟುಗಳಿವೆ. ಹೋಂ ಥಿಯೇಟರ್ ಇದೆ. ಪರಸ್ಪರ ಚರ್ಚಿಸಲು ಅವಕಾಶ ಇದೆ. 32 ಇಂಚಿನ ಟಿವಿ, ಚಾಲಕನ ಜೊತೆ ಮಾತನಾಡಲು ಇಂಟರ್‍ಕಾಂ ವ್ಯವಸ್ಥೆ ಇದೆ. ಜನರೇಟರ್ ಇದೆ. ಆಡಿಯೋ ಸಿಸ್ಟಂ, ಕ್ಯಾಮೆರಾ, ಹೊರಮುಖವಾಗಿ ಎಲ್‍ಇಡಿ ಡಿಸ್‍ಪ್ಲೇ ಇದೆ ಎಂದು ವಿವರಿಸಿದರು.

ಚುನಾವಣಾ ಗೀತೆ, ಭಾಷಣ ಕೇಳಿಸುವುದಲ್ಲದೆ, 5 ಸಾವಿರ ಜನರಿಗೆ ಬಸ್‍ನಿಂದ ಭಾಷಣ ಮಾಡುವ ವ್ಯವಸ್ಥೆ ಒಳಗೊಂಡಿದೆ. ಯಾತ್ರೆ ಯಶಸ್ವಿಗೆ ಮುಂಚಿತವಾಗಿಯೇ 4 ಸಪೋರ್ಟ್ ವಾಹನ ತೆರಳಿ ಬಸ್ ಬರುವ ಕುರಿತು ಪ್ರಚಾರ ಮಾಡಲಿದೆ. ಮಾಧ್ಯಮದವರು ವಿಡಿಯೋ, ಫೋಟೋ ತೆಗೆಯಲು ಅನುಕೂಲ ಮಾಡಿಕೊಡಲು 4 ಮೀಡಿಯಾ ವೆಹಿಕಲ್ ಇರುತ್ತದೆ ಎಂದರು.

Leave a Reply

Your email address will not be published. Required fields are marked *

You may have missed