ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ರೈತರಿಗೆ ಅಪಾಯ: ಶಿವಸೇನೆ ಮುಖವಾಣಿ ‘ಸಾಮ್ನಾ’ ಆತಂಕ

ಮುಂಬೈ: ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಕಟುವಾಗಿ ಟೀಕಿಸಿದ್ದು, ಇದು ದೇಶದ ರೈತರು ಮತ್ತು ಕಾರ್ಮಿಕರ ಬದುಕಿಗೆ ಅಪಾಯಕಾರಿಯಾಗಿದೆ ಎಂದು ಹೇಳಿದೆ. ಪಕ್ಷದ ಮುಖವಾಣಿ ಸಾಮ್ನಾ’ದಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ, ಈ ಒಪ್ಪಂದವನ್ನು ಕೇವಲ ವ್ಯಾಪಾರ ಒಪ್ಪಂದವಲ್ಲ, ಬದಲಾಗಿ “ಭಾರತೀಯ ರೈತರ ವಿರುದ್ಧದ ಯುದ್ಧ ಘೋಷಣೆ” ಎಂದು ಬಣ್ಣಿಸಲಾಗಿದೆ.
ಪ್ರಧಾನಿಯವರು ದೇಶದ ಹಿತಾಸಕ್ತಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆಯೇ ಅಥವಾ ಅಮೆರಿಕದ “ಮಾರಾಟ ಏಜೆಂಟ್” ಆಗಿ ವರ್ತಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಸಂಪಾದಕೀಯ ಎತ್ತಿದೆ. ಈ ಒಪ್ಪಂದದಿಂದ ದೇಶದ ಆಹಾರ ಪೂರೈಕೆ ವ್ಯವಸ್ಥೆಯೇ ಅಪಾಯಕ್ಕೆ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದ್ದು, ರೈತರು ಮತ್ತು ಕಾರ್ಮಿಕರು ಒಗ್ಗೂಡಿ ಕೇಂದ್ರ ಸರ್ಕಾರದಿಂದ ಹೊಣೆಗಾರಿಕೆ ಕೇಳಬೇಕೆಂದು ಕರೆ ನೀಡಿದೆ.
ದೇಶೀಯ ಆರ್ಥಿಕತೆ ಒತ್ತಡದಲ್ಲಿರುವ ಸಮಯದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸಾಮ್ನಾ ಹೇಳಿದೆ. ಜನವರಿ ಅಂತ್ಯದಲ್ಲಿ ರೂಪಾಯಿ ಡಾಲರ್ ಎದುರು ದಾಖಲೆಯ ಕನಿಷ್ಠ ಮಟ್ಟ ತಲುಪಿದ್ದರೂ, ಸರ್ಕಾರವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು “ಹೊಸ ದೇವರು” ಎಂದು ಕಾಣುತ್ತಿರುವಂತೆ ವರ್ತಿಸುತ್ತಿದ್ದು, ದೇಶದ ಸಾರ್ವಭೌಮತ್ವವನ್ನು ಪಣಕ್ಕಿಟ್ಟಿದೆ ಎಂದು ಟೀಕಿಸಿದೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಸಂಪಾದಕೀಯ, ಅಮೆರಿಕದ ಒತ್ತಡ ಮತ್ತು ಭಯದ ಹಿನ್ನೆಲೆಯಲ್ಲಿ ಪ್ರಧಾನಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಆರೋಪಿಸಿದೆ. ಹಲವು ತಿಂಗಳು ಸ್ಥಗಿತಗೊಂಡಿದ್ದ ಮಾತುಕತೆಗಳು ಹಠಾತ್ತನೆ ಅಂತಿಮಗೊಂಡಿರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಕಡಿತಗೊಳಿಸಿ ಅಮೆರಿಕದಿಂದ ಭಾರಿ ಪ್ರಮಾಣದಲ್ಲಿ ಆಮದು ಮಾಡಲು ಮುಂದಾಗಿರುವುದರಿಂದ ದೇಶದ ಆರ್ಥಿಕ ಸ್ವಾಯತ್ತತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಲಾಗಿದೆ. ಅಲ್ಲದೆ, ಯುಎಸ್ ಕೃಷಿ ಉತ್ಪನ್ನಗಳು, ಹಾಲು ಮತ್ತು ಡೈರಿ ವಸ್ತುಗಳು, ಹತ್ತಿ, ದ್ವಿದಳ ಧಾನ್ಯಗಳು, ಸೋಯಾಬೀನ್, ಮೆಕ್ಕೆಜೋಳ, ಹಣ್ಣು–ತರಕಾರಿಗಳು ಸುಂಕವಿಲ್ಲದೆ ದೇಶೀಯ ಮಾರುಕಟ್ಟೆಗೆ ಪ್ರವೇಶಿಸುವುದರಿಂದ ಭಾರತೀಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೇಳಲಾಗಿದೆ.
ಸಾಲಭಾರದಿಂದ ರೈತರು ಆತ್ಮಹತ್ಯೆಗೆ ಮುಂದಾಗುತ್ತಿರುವ ಸಂದರ್ಭದಲ್ಲಿ, ವಿದೇಶಿ ಉತ್ಪನ್ನಗಳಿಗೆ “ಕೆಂಪು ಹಾಸು” ಹಾಸುತ್ತಿರುವುದು ಅಸ್ವೀಕಾರಾರ್ಹ ಎಂದು ಶಿವಸೇನೆ (ಯುಬಿಟಿ) ಆಕ್ಷೇಪಿಸಿದೆ. ಈ ಒಪ್ಪಂದವು ರೈತರ ಹಿತಾಸಕ್ತಿಗಳಿಗೂ ರಾಷ್ಟ್ರದ ಸಾರ್ವಭೌಮತ್ವಕ್ಕೂ ಧಕ್ಕೆಯಾಗಿದೆ ಎಂದು ಸಂಪಾದಕೀಯ ಒತ್ತಿ ಹೇಳಿದೆ.
