ಭಾರತೀಯ ರೈಲ್ವೆ 871 ಕೋಟಿ ರೂ. ಯೋಜನೆಗಳಿಗೆ ಅನುಮತಿ

0
KERALA - VANDE BHARAT TRAIN

ನವದೆಹಲಿ: ದೇಶದ ರೈಲು ಮೂಲಸೌಕರ್ಯವನ್ನು ಆಧುನೀಕರಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ ಭಾರತೀಯ ರೈಲ್ವೆ 871 ಕೋಟಿ ರೂ. ಮೌಲ್ಯದ ಹಲವು ಕಾರ್ಯತಂತ್ರದ ಯೋಜನೆಗಳಿಗೆ ಗುರುವಾರ ಅನುಮತಿ ನೀಡಿದೆ. ಉತ್ತರ, ದಕ್ಷಿಣ ಹಾಗೂ ಪೂರ್ವ ರೈಲ್ವೆ ವಲಯಗಳಲ್ಲಿ ಜಾರಿಯಾಗಲಿರುವ ಈ ಯೋಜನೆಗಳು ಕೋಚಿಂಗ್ ನಿರ್ವಹಣಾ ವ್ಯವಸ್ಥೆಯ ನವೀಕರಣ, ದಟ್ಟಣೆ ನಿವಾರಣೆ ಹಾಗೂ ಪ್ರಯಾಣಿಕ-ಸರಕು ಸಾಮರ್ಥ್ಯ ವೃದ್ಧಿಗೆ ಉತ್ತೇಜನ ನೀಡಲಿವೆ.

ರಾಜಸ್ಥಾನದ ಶ್ರೀ ಗಂಗಾನಗರ ರೈಲು ನಿಲ್ದಾಣದಲ್ಲಿ 174.26 ಕೋಟಿ ರೂ. ವೆಚ್ಚದಲ್ಲಿ ಕೋಚ್ ನಿರ್ವಹಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. ಇದು LHB ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಂತಹ ಆಧುನಿಕ ರೋಲಿಂಗ್ ಸ್ಟಾಕ್‌ಗಳ ನಿರ್ವಹಣೆಗೆ ಅಗತ್ಯ ಮೂಲಸೌಕರ್ಯವನ್ನು ಬಲಪಡಿಸುವ ಉಪಕ್ರಮವಾಗಿದೆ.

ಈ ಯೋಜನೆಯಡಿ 600 ಮೀಟರ್ ಉದ್ದದ ಎರಡು ವಾಷಿಂಗ್ ಲೈನ್‌ಗಳು, 650 ಮೀಟರ್‌ನ ಮೂರು ಸ್ಟೇಬಿಲಿಂಗ್ ಲೈನ್‌ಗಳು, ಎರಡು ಪಿಟ್ ಲೈನ್‌ಗಳು, ಒಂದು ವೀಲ್ ಲೇಥ್ ಲೈನ್ ಹಾಗೂ ಎಂಜಿನ್ ಎಸ್ಕೇಪ್ ಲೈನ್ ನಿರ್ಮಾಣವಾಗಲಿದೆ. ಜೊತೆಗೆ ಸಿಕ್ ಲೈನ್ ಶೆಡ್ ಅಭಿವೃದ್ಧಿಪಡಿಸಲಾಗುತ್ತದೆ. ಯೋಜನೆ ಕಾರ್ಯರೂಪಕ್ಕೆ ಬಂದ ನಂತರ ದಿನಕ್ಕೆ ಆರು ಹೆಚ್ಚುವರಿ ರೇಕ್‌ಗಳ ನಿರ್ವಹಣಾ ಸಾಮರ್ಥ್ಯ ಹೆಚ್ಚಲಿದೆ ಎಂದು ಹೇಳಲಾಗಿದೆ.

ಬಿಕಾನೇರ್ ಭಾಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ LHB ಸೇವೆಗಳ ವಿಸ್ತರಣೆಯಿಂದ ಉಂಟಾಗಿರುವ ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ರಾಜಸ್ಥಾನದ ಲಾಲ್‌ಗಢದಲ್ಲಿ 139.68 ಕೋಟಿ ರೂ. ವೆಚ್ಚದಲ್ಲಿ ಸೌಲಭ್ಯ ವೃದ್ಧಿಗೆ ಅನುಮತಿ ನೀಡಲಾಗಿದೆ.

ಇಲ್ಲಿ ಹೊಸ ವಾಷಿಂಗ್ ಲೈನ್, ಶೆಡ್ ವ್ಯವಸ್ಥೆ, ಸಿಕ್ ಲೈನ್ ವಿಸ್ತರಣೆ ಹಾಗೂ 1000 ಚದರ ಮೀಟರ್ ಸೇವಾ ಕಟ್ಟಡ ನಿರ್ಮಾಣವಾಗಲಿದೆ. ಜೊತೆಗೆ ಸ್ವಯಂಚಾಲಿತ ಕೋಚ್ ವಾಷಿಂಗ್ ಪ್ಲಾಂಟ್, ಕೋಚ್ ಲಿಫ್ಟಿಂಗ್ ವ್ಯವಸ್ಥೆ ಮತ್ತು 25 ಟನ್ ಸಾಮರ್ಥ್ಯದ EOT ಕ್ರೇನ್‌ಗಳ ಅಳವಡಿಕೆ ಯೋಜನೆಯಲ್ಲಿ ಸೇರಿವೆ. ಇದು ವೇಗವಾದ ಟರ್ನ್‌ಅರೌಂಡ್ ಹಾಗೂ ವಿಶ್ವಾಸಾರ್ಹ ಸೇವೆಗೆ ನೆರವಾಗಲಿದೆ.

ದಕ್ಷಿಣ ರೈಲ್ವೆಯಡಿ ಕೇರಳದ 21.10 ಕಿ.ಮೀ. ಉದ್ದದ ತುರಾವೂರ್–ಮರಾರಿಕುಲಂ ರೈಲು ವಿಭಾಗ ದ್ವಿಗುಣಗೊಳಿಸುವ ಯೋಜನೆಗೆ 450.59 ಕೋಟಿ ರೂ. ಮಂಜೂರಾಗಿದೆ. ಇದು ಎರ್ನಾಕುಲಂ–ಅಲಪ್ಪುಳ–ಕಾಯಂಕುಲಂ ಕಾರಿಡಾರ್ನಲ್ಲಿ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ಪ್ರಯಾಣಿಕರ ಜೊತೆಗೆ ಬಂದರು ಸಂಬಂಧಿತ ಸರಕು ಸಾಗಣೆಯಿಗೂ ಮಹತ್ವದ್ದಾಗಿದೆ. ಯೋಜನೆ ಜಾರಿಗೆ ಬಂದರೆ ಲಾಜಿಸ್ಟಿಕ್ಸ್ ಸುಗಮವಾಗಿ ಸಾಗಲಿದ್ದು, ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ.

ಪೂರ್ವ ರೈಲ್ವೆಯಡಿ ಪಶ್ಚಿಮ ಬಂಗಾಳದ ಅಸನ್ಸೋಲ್ ಪ್ರದೇಶದಲ್ಲಿ 4.75 ಕಿ.ಮೀ. ಉದ್ದದ ಕಾಲಿಪಹರಿ ಬೈಪಾಸ್ ಮಾರ್ಗವನ್ನು 107.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಪ್ರಸ್ತುತ ಆಗ್ನೇಯ ಮತ್ತು ಪೂರ್ವ ರೈಲ್ವೆಗಳ ನಡುವೆ ಸಂಚರಿಸುವ ರೈಲುಗಳು ಎಂಜಿನ್ ರಿವರ್ಸಲ್‌ಗಾಗಿ ಯಾರ್ಡ್‌ಗೆ ಪ್ರವೇಶಿಸಬೇಕಾಗುತ್ತದೆ. ಹೊಸ ಬೈಪಾಸ್ ನಿರ್ಮಾಣವಾದರೆ ನೇರ ಸಂಪರ್ಕ ಸಿಗಲಿದ್ದು, ದಟ್ಟಣೆ ಮತ್ತು ವಿಳಂಬ ಸಮಸ್ಯೆಗಳು ಕಡಿಮೆಯಾಗಲಿವೆ.

ಒಟ್ಟಾರೆ, ಈ ಯೋಜನೆಗಳು ಕಾರ್ಯಾಚರಣಾ ದಕ್ಷತೆ ಹೆಚ್ಚಿಸುವುದರೊಂದಿಗೆ, ಭವಿಷ್ಯದ ಹೆಚ್ಚುವರಿ ರೈಲು ಸೇವೆಗಳಿಗೆ ಭದ್ರ ನೆಲೆ ಕಲ್ಪಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *