ಬಜೆಟ್ ಬಗ್ಗೆ ಓಕೆ, ಆದರೆ ಭರವಸೆ ಬಗ್ಗೆ ನುಡಿದಂತೆ ನಡೀತೀರಾ? ಆಶಾ ಕಾರ್ಯಕರ್ತೆಯರ ಖಾರವಾದ ಪ್ರಶ್ನೆಗೆ ಸಿಎಂ ಏನಂತಾರೆ?

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಬಜೆಟ್’ನಲ್ಲಿ ಘೋಷಿಸಿರುವ ಒಂದು ಸಾವಿರ ರೂಪಾಯಿ ಗೌರವಧನ ನೀಡಿರುವುದನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸ್ವಾಗತಿಸಿದೆ. ಅದರಂತೆ ಬಜೆಟ್ ಪೂರ್ವದಲ್ಲಿ ನೀಡಿರುವ ಭರವಸೆಯನ್ನೂ ಈಡೇರಿಸಿ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಒತ್ತಾಯಿಸಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ರೂಪಾಯಿ ಗೌರವಧನ ಹೆಚ್ಚಳ ಮಾಡಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಡಿ.ನಾಗಲಕ್ಷ್ಮಿ, ‘ಇದು ರಾಜ್ಯ ಬಜೆಟ್ ಸಂದರ್ಭದಲ್ಲಿ ಬಜೆಟ್ ಅಲ್ಲಿ ಘೋಷಣೆ ಮಾಡಿದ ಒಂದು ಸಾವಿರ ರೂಪಾಯಿ ಆಗಿರುತ್ತದೆ. ಇದು ರಾಜ್ಯದ ಎಲ್ಲಾ 41,000 ಆಶಾ ಗಳಿಗೆ ರಾಜ್ಯದಿಂದ ಹೆಚ್ಚಳವಾಗಿರುವುದಿಲ್ಲ .ಕೇವಲ 15004 ಮಂದಿಗೆ ಈ 1000 ರೂ ಹೆಚ್ಚಳ ಆಗಿದೆ. ಬಜೆಟ್ ನಲ್ಲಿ ಘೋಷಣೆ ಆಗಿರುವುದು ಈಗ ಸರ್ಕಾರದ ಅನುಮೋದನೆಯಾಗಿ ಆದೇಶವಾಗಿರುತ್ತದೆ’ ಎಂದು ಗಮನಸೆಳೆದಿದ್ದಾರೆ.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ AIUTUC, ನೇತೃತ್ವದಲ್ಲಿ ಜನವರಿ 7 ರಿಂದ 10ರವರೆಗೆ ಅನಿರ್ದಿಷ್ಟ- ಅಹೋ ರಾತ್ರಿ ಆಶಾ ಕಾರ್ಯಕರ್ತೆಯರ ಹೋರಾಟವು ಫ್ರೀಡಂ ಪಾರ್ಕಲ್ಲಿ ನಡೆದಿರುತ್ತದೆ. ಕೊನೆಯ ದಿನ ಮಾನ್ಯ ಮುಖ್ಯಮಂತ್ರಿಗಳು ಹೋರಾಟ ನಿರತ ಸಂಘಟನಾಕಾರರು, ಆಶಾ ಕಾರ್ಯಕರ್ತೆಯರನ್ನು ಕರೆದು ಬೇಡಿಕೆಗಳ ಬಗ್ಗೆ ಚರ್ಚಿಸಿ, ಮಾಸಿಕ 10,000 ಪ್ರತಿ ಆಶಾ ಕಾರ್ಯಕರ್ತೆಗೆ ನೀಡುವ ಭರವಸೆ ನೀಡಿದ್ದಾರೆ. ಹಾಗೆಯೇ ಮಾಧ್ಯಮಗಳ ಮೂಲಕವೂ ಘೋಷಣೆ ಮಾಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಶಿವಕುಮಾರ್ ಕೂಡಾ ಫ್ರೀಡಂ ಪಾರ್ಕಿಗೆ ಆಗಮಿಸಿ ಹೋರಾಟ ನಿರತ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳು ಆರೋಗ್ಯ ಇಲಾಖೆಯಿಂದ ರೂ.10,000 ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ನೀಡಲಾಗುವುದು ಎಂದು ತಿಳಿಸಿರುತ್ತಾರೆ ಎಂದು ಡಿ.ನಾಗಲಕ್ಷ್ಮಿ ನೆನಪಿಸಿದ್ದಾರೆ.
ಇಲ್ಲಿಯವರೆಗೆ ನಾಲ್ಕು ತಿಂಗಳು ಕಳೆದಿವೆ. ಘೋಷಣೆಯ ಪ್ರಕಾರ ಏಪ್ರಿಲ್ ತಿಂಗಳಿನಿಂದ ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂಪಾಯಿ ನೀಡಬೇಕಿದೆ. ಈಗ ಮೇ ತಿಂಗಳು. ಆದರೂ ಇನ್ನೂ ಸರ್ಕಾರದ ಆದೇಶ ಆಗಿರುವುದಿಲ್ಲ ಈ ಮೇಲಿನ ಒಂದು ಸಾವಿರ ರೂಪಾಯಿ ಸೇರಿದಂತೆ ಒಟ್ಟು 10,000 ಗೌರವಧನ ಘೋಷಣೆಗಾಗಿ ಆಶಾ ಕಾರ್ಯಕರ್ತೆಯರು ನಿರೀಕ್ಷೆಯಲ್ಲಿ ಇರುವರು. ಕೂಡಲೇ ಸರ್ಕಾರ ಮಾತು ಕೊಟ್ಟಂತೆ 10000 ಕನಿಷ್ಠ ಗೌರವ ಧನ ನಿಗದಿ ಬಗ್ಗೆ ಆದೇಶ ಮಾಡುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಗ್ರಹಿಸುತ್ತದೆ ಎಂದು ಡಿ.ನಾಗಲಕ್ಷ್ಮಿ ತಿಳಿಸಿದ್ದಾರೆ.