ಬಂದೀಖಾನೆಯಲ್ಲಿ ಮಾರಾಮಾರಿ ; ದಾವೂದ್ ಬಂಟ ಸೇರಿ ಇಬ್ಬರ ಹತ್ಯೆ

ಬಂದರುನಗರಿ ಮಂಗಳೂರಿನ ಬಂದೀಖಾನೆಯಲ್ಲಿ ಭೂಗತ ಪಾತಕಿ ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ದಾವೂದ್ ಇಬ್ರಾಹಿಂನ ಬಂಟ ಸೇರಿದಂತೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.. ಮೃತರನ್ನು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಮಾಡೂರು ಯೂಸುಫ್ ಮತ್ತು ವಿಕ್ಕಿ ಶೆಟ್ಟಿ ಬಂಟ ಗಣೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಬೆಳಿಗ್ಗೆ 7 ಗಂಟೆ ಸುಮಾರಿಗೆ ಮಂಗಳೂರಿನ ಸಬ್ ಜೈಲಿನಲ್ಲಿ ಕೈದಿಗಳ ಉಪಹಾರ ಸಮಯದಲ್ಲಿ ರೌಡಿಶೀಟರ್ ಆಗಿರುವ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರ ಆಕಾಶಭವನ ಶರಣ್ ಹಾಗೂ ದಾವೂದ್ ಇಬ್ರಾಹಿಂನ ಭಂಟ ಮಾಡೂರು ಯುಸೂಫ್ ಗ್ಯಾಂಗ್ ಗಳ ನಡುವೆ ಗ್ಯಾಂಗ್ ವಾರ್ ನಡೆಯುತ್ತಲೇ ಶರಣ್ ಗ್ಯಾಂಗ್ ನ ಹುಡುಗರು ಮಚ್ಚು ಲಾಂಗುಗಳಿಂದ ಮಾಡೂರು ಯುಸೂಫ್ ಮೇಲೆ ಎರಗಿದ್ದಾರೆ. ಇದರಿಂದ ಮಾಡೂರು ಯುಸೂಫ್ ಸ್ಥಳದಲ್ಲಿಯೇ ಸಾವನ್ನಪ್ಪಿದ. ಮತ್ತೋರ್ವ ರೌಡಿ ಛೋಟಾ ಶಕೀಲ್ ನ ಸಹಚರ ಗಣೇಶ್ ಶೆಟ್ಟಿ ಮೇಲೆ ಎರಗಿದ್ದಾರೆ. ಆರು ಮಂದಿ ಕೈದಿಗಳ ಮೇಲೆ ದಾಳಿ ಮಾಡಿದ ತಂಡ ಈ ಮಾರಾಮಾರಿ ತಪ್ಪಿಸಲು ಬಂದ ಪೊಲೀಸರ ಮೇಲೂ ದಾಳಿ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಕೈದಿಗಳು ಮತ್ತು ಪೊಲೀಸ್ ಸಿಬ್ಬಂದಿಯ ಆಸ್ಪತ್ರೆ ದಾಖಲಾದರು.
ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಗಣೇಶ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಪಕ್ಷಿ ಹಾರಿ ಹೋಯಿತು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಮುರುಗನ್ ಸುದ್ದಿಗಾರರಿಗೆ ತಿಳಿಸಿದರು.
ಒಂದು ವಾರದಿಂದಲೂ ಶರಣ್ ಹಾಗೂ ಮಾಡೂರು ಯೂಸುಫ್ ಗ್ಯಾಂಗ್ ನ ನಡುವೆ ಕಿರಿಕ್ ನಡೆಯುತ್ತಲೇ ಇತ್ತು. ದಾವೂದ್ ಇಬ್ರಾಹಿಂನೊಂದಿಗೆ ಗುರುತಿಸಿಕೊಂಡಿದ್ದ ಮಾಡೂರು ಯೂಸುಫ್ ದೇಶದ್ರೋಹ ಕೆಲಸ ಮಾಡುತ್ತಿದ್ದ. ಹೀಗಾಗಿ ಆತನನ್ನು ಹತ್ಯೆ ಮಾಡುವಂತೆ ಪಾತಕಿ ವಿಕ್ಕಿ ಶೆಟ್ಟಿ ತನ್ನ ಸಹಚರ ಶರಣ್ ಗೆ ಸೂಚಿಸಿದ್ದ ಎನ್ನಲಾಗಿದೆ. ಈ ಮಾಹಿತಿ ತಿಳಿದಿದ್ದ ಪೊಲೀಸರು ಶರಣ್ ಗ್ಯಾಂಗ್ ನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ತಯಾರಿ ನಡೆಸಿತ್ತು. ಇದನ್ನು ಅರಿತ ಶರಣ್ ಗ್ಯಾಂಗ್, ಮಾಡೂರು ಯೂಸಫ್ ನನ್ನು ಮುಗಿಸಿದ್ದಾರೆ.