ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ; ಸಂಪುಟ ಸಭೆ ನಿರ್ಧಾರ

ಗ್ರಾಮ ಪಂಚಾಯಿತಿಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಪಂಚಾಯತ್ ರಾಜ್ ಕಾಯ್ದೆಗೆ 110ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಮಾಡುವ ಮೂಲಕ ಇದೇ 16ರಂದು ಆರಂಭಗೊಳ್ಳುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವ ಸಂಬಂಧ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿಯನ್ನು 2012ರಲ್ಲಿ ಸಲ್ಲಿಸಲಾಗಿದ್ದು, ಅದಾದ ನಂತರ ಮೀಸಲಾತಿಯಲ್ಲಿ ಹಾಗೂ ಜನಸಂಖ್ಯೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಬಗ್ಗೆ ಮತ್ತಷ್ಟು ಅಧ್ಯಾಯನ ನಡೆಸಿ, ನಿರ್ಧಾರ ಕೈಗೊಳ್ಳಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಸಂಪುಟ ಸಭೆಯ ನಿರ್ಣಯಗಳನ್ನು ವಿವರಿಸಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, 1973ರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹಾಗೂ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಹೆಚ್ಚಿನ ಅಧಿಕಾರ ನೀಡಲು ನಿರ್ಧರಿಸಲಾಗಿದೆ. ಪ್ರತಿ 6 ತಿಂಗಳಿಗೆ ಗ್ರಾಮ ಹಾಗೂ ವಾರ್ಡ್ ಸಭೆ ನಡೆಸಬೇಕು. ಅದರ ಜೊತೆಗೆ ಹಟ್ಟಿಗಳು, ತಾಂಡಾಗಳನ್ನು ಸೇರ್ಪಡೆ ಮಾಡಿಕೊಂಡು ಸಭೆ ನಡೆಸಬೇಕು. ಪಂಚಾಯತ್ ಅಧ್ಯಕ್ಷರ ಅವಧಿ 5 ವರ್ಷಗಳಿಗೆ ನಿಗದಿ ಸೇರಿದಂತೆ ಮಹತ್ವದ ತಿದ್ದುಪಡಿಗಳನ್ನು ತರುವುದಾಗಿ ವಿವರಿಸಿದರು.
ದಲಿತ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡುವ ಸಂಬಂಧ ಎ.ಜೆ. ಸದಾಶಿವ ನೀಡಿರುವ ವರದಿಯನ್ನು ಪ್ರಚಲಿತ ಜನಸಂಖ್ಯೆ ಹಾಗೂ ಪ್ರಸಕ್ತ ಮೀಸಲಾತಿ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಕಾನೂನು ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ. ಈ ಬಗ್ಗೆ ವರದಿ ಬಂದ ಮೇಲೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜಯಚಂದ್ರ ಹೇಳಿದರು. ಈ ವಿಷಯ ಸಂಪುಟದಲ್ಲಿ ವ್ಯಾಪಕವಾಗಿ ಚರ್ಚೆಯಾಯಿತು. ಅನೇಕ ಅಂಶಗಳ ಬಗ್ಗೆ ಹಲವಾರು ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಎಂದರು.
ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ಅವರ ರಾಜೀನಾಮೆಯನ್ನು ಅಂಗೀಕರಿಸಿ ಹೊಸಬರನ್ನು ನೇಮಕ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು ಎಂದರು.
ಭಾನುವಾರ ಹಾಗೂ 2ನೇ ಶನಿವಾರವನ್ನು ಹೊರತುಪಡಿಸಿ, ಮುಂದಿನ ವರ್ಷಕ್ಕೆ 22 ಸಾರ್ವತ್ರಿಕ ರಜೆಗಳನ್ನು ಘೋಷಿಸಲಾಗಿದೆ. ಡಿಸೆಂಬರ್ 19ರಿಂದ 23ರವರೆಗೆ ಬೆಂಗಳೂರಿನಲ್ಲಿ ಅಖಿಲ ಭಾರತ ಅರಣ್ಯ ಅಧಿಕಾರಿಗಳ ಕ್ರೀಡಾಕೂಟ ನಡೆಸಲು ನಾಲ್ಕು ಕೋಟಿ ರೂಪಾಯಿ ನೀಡಲಾಗಿದೆ ಎಂದರು.
ಕಲಬುರ್ಗಿ, ಹಾವೇರಿ, ಬೆಂಗಳೂರಿನ ಅಡುಗೋಡಿ, ಮಂಡ್ಯ, ಮದ್ದೂರಿನಲ್ಲಿ ಮುಖ್ಯಮಂತ್ರಿಗಳ ಭೇಟಿ ವೇಳೆ ಗಲಾಟೆ ಮಾಡಿದ ಪ್ರಕರಣ, ಕೃಷಿ ಅಧಿಕಾರಿಗೆ ದಿಗ್ಬಂಧನ ವಿಧಿಸಿದ ಪ್ರಕರಣ, ಆಶ್ರಯ ನಿವೇಶನ, ಭೂಸ್ವಾಧೀನ ವಿಷಯದಲ್ಲಿ ಮಾಡಿದ ಗಲಾಟೆ, ತುಮಕೂರು ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯಲು ನುಗ್ಗಿದ ಪ್ರಕರಣ ಸೇರಿದಂತೆ 100 ಪ್ರಕರಣಗಳನ್ನು ಹಿಂಪಡೆಯಲಾಯಿತು ಎಂದರು.