‘ನರ್ಸ್ ನಿಮಿಷಾ ಪ್ರಿಯಾ ಜೀವ ಉಳಿಸಲು ಪ್ರಧಾನಿ ಮಧ್ಯಪ್ರವೇಶಿಸಲಿ’: ವೇಣುಗೋಪಾಲ್ ಒತ್ತಾಯ

0
aicc - KC venugopal

ತಿರುವನಂತಪುರಂ: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಜೀವ ಉಳಿಸಲು ತಕ್ಷಣದ ರಾಜತಾಂತ್ರಿಕ ಮಧ್ಯಪ್ರವೇಶ ಅಗತ್ಯವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಕೆ.ಸಿ. ವೇಣುಗೋಪಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಜುಲೈ 16 ರಂದು ನಿಮಿಷಾಗೆ ಗಲ್ಲು ಶಿಕ್ಷೆ ಜರುಗಬೇಕಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಅವರಿಗೆ ಬರೆದ ಪತ್ರದಲ್ಲಿ ವೇಣುಗೋಪಾಲ್, ಯೆಮೆನ್‌ನಲ್ಲಿ ನಡೆಯುತ್ತಿರುವ ಗೃಹಯುದ್ಧ ಹಾಗೂ ಆಡಳಿತಾತ್ಮಕ ಅಸ್ಥಿರತೆ ಈ ಪ್ರಕರಣವನ್ನು ಇನ್ನಷ್ಟು ಸಂಕೀರ್ಣಗೊಳಿಸಿದ್ದು, ಭಾರತವು ತಕ್ಷಣ ಸಂಭಾವ್ಯ ರಾಜತಾಂತ್ರಿಕ ಮಾರ್ಗಗಳನ್ನು ಉಪಯೋಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ನಡುವೆ, ಪ್ರಿಯಾಳ ಮರಣದಂಡನೆ ತಡೆಯಲು ತುರ್ತು ದೌತ್ಯ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಯಿತು. ಜುಲೈ 15 ರಂದು ಈ ಅರ್ಜಿ ವಿಚಾರಣೆಗೆ ಬರಲಿದೆ.

ನಿಮಿಷಾ ಪ್ರಕರಣದ ಹಿಂದಿನ ಹಿನ್ನೆಲೆ

ನರ್ಸ್‌ ಆಗಿ 2008ರಿಂದ ಯೆಮೆನ್‌ನಲ್ಲಿ ಸೇವೆ ಸಲ್ಲಿಸಿದ್ದ ನಿಮಿಷಾ, 2017ರಲ್ಲಿ ಮೆಹದಿ ಎಂಬ ವ್ಯಕ್ತಿಯೊಂದಿಗೆ ವ್ಯವಹಾರ ನಡೆಸಿ ತನ್ನದೇ ಕ್ಲಿನಿಕ್ ಆರಂಭಿಸಿದ್ದರು. ವ್ಯವಹಾರ ವೈಫಲ್ಯದಿಂದ ಇಬ್ಬರ ಮಧ್ಯೆ ಘರ್ಷಣೆ ಉಂಟಾಗಿ, ಮೆಹದಿಗೆ ನಿದ್ರಾಜನಕ ನೀಡಿದ ಪ್ರಿಯಾ ಅವರ ಕೃತ್ಯದಿಂದ ಅವನು ಮೃತಪಟ್ಟಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ 2018ರಲ್ಲಿ ಬಂಧನಕ್ಕೊಳಗಾದರು. 2020ರಲ್ಲಿ ಮರಣದಂಡನೆ ವಿಧಿಸಲಾಯಿತು. ನವೆಂಬರ್ 2023ರಲ್ಲಿ ಯೆಮೆನ್‌ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ಕೂಡ ಶಿಕ್ಷೆಗೆ ಸಮರ್ಥನೆ ನೀಡಿತು.

ಇನ್ನೊಂದೆಡೆ, ನಿಮಿಷಾ ಅವರ ತಾಯಿ ಪ್ರೇಮಾ ಕುಮಾರಿ ತಮ್ಮ ಮಗಳನ್ನು ಉಳಿಸುವ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಅವರು ಯೆಮೆನ್‌ಗೆ ತೆರಳಿ ಬಲಿಪಶು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದಾರೆ. ಅವರ ಕುಟುಂಬ, ಭಾರತ ಸರ್ಕಾರದ ಸಹಾಯದಿಂದ ತಾಯಿ ಹಾಗೂ ಮಗಳನ್ನು ಮನೆಗೆ ಹಿಂತಿರುಗಿಸುವ ನಿರೀಕ್ಷೆ ಇದೆ ಎಂದು ಆಪ್ತರು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *