ಕಬ್ಬು, ಸಕ್ಕರೆ ದರ ನಿಗದಿಯಲ್ಲಿ ರಾಜ್ಯದ್ದು ಸೀಮಿತ ಪಾತ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ

0
Siddaramaiah 1

ಬೆಂಗಳೂರು: “ಕಬ್ಬು ಮತ್ತು ಸಕ್ಕರೆ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರ ಅತ್ಯಂತ ಸೀಮಿತವಾಗಿದೆ. ಈ ಸಂಬಂಧಿತ ದರ ನಿಗದಿ ಹಾಗೂ ನಿಯಂತ್ರಣ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವಶದಲ್ಲಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು 2025ರ ಮೇ 6ರಂದು ಎಫ್.ಆರ್.ಪಿ (Fair and Remunerative Price) — ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ನಿಗದಿಪಡಿಸಿರುವುದಾಗಿ ತಿಳಿಸಿದರು.

“ಕೇಂದ್ರ ಸರ್ಕಾರವೇ ದರ ನಿಗದಿಪಡಿಸುತ್ತದೆ. ರಾಜ್ಯ ಸರ್ಕಾರದ ಕೆಲಸ ರೈತರಿಗೆ ನಿಗದಿತ ತೂಕ, ಬೆಲೆ ಹಾಗೂ ಸಮಯಕ್ಕೆ ಪಾವತಿ ಖಚಿತಪಡಿಸುವುದಾಗಿದೆ. ಇದು ಕಬ್ಬು ನಿಯಂತ್ರಣ ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ,” ಎಂದರು.

ಮುಖ್ಯಮಂತ್ರಿ ಅವರು ಮುಂದುವರಿದು, ಸಕ್ಕರೆ ಮೇಲಿನ ನಿಯಂತ್ರಣವೂ ‘ಅಗತ್ಯ ವಸ್ತುಗಳ ಕಾಯ್ದೆ’ ಪ್ರಕಾರ ಕೇಂದ್ರ ಸರ್ಕಾರದ ವಶದಲ್ಲಿದೆ ಎಂದು ಹೇಳಿದರು. “ಯುಪಿಎ ಸರ್ಕಾರದ ಅವಧಿಯಿಂದ 2017–18 ರವರೆಗೆ ರಿಕವರಿ ಶೇ.9.5 ರಷ್ಟಿತ್ತು. ಬಳಿಕ 2018–19 ರಿಂದ 2021–22 ರವರೆಗೆ ಅದನ್ನು ಶೇ.10 ಕ್ಕೆ, ನಂತರ 2022–23 ರಿಂದ ಶೇ.10.25 ಕ್ಕೆ ಏರಿಸಲಾಯಿತು. ಇದರಿಂದ ನಮ್ಮ ರಾಜ್ಯದ ರೈತರಿಗೆ ಅನ್ಯಾಯವಾಗಿದೆ,” ಎಂದು ಅಭಿಪ್ರಾಯಪಟ್ಟರು.

ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ) 2019ರಲ್ಲಿ ಪ್ರತಿ ಕೆ.ಜಿ.ಗೆ ₹31 ನಿಗದಿಯಾಗಿದ್ದು, ಅದಾದ ನಂತರ ಪರಿಷ್ಕರಣೆ ನಡೆದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು. “ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಸಕ್ಕರೆ ರಫ್ತನ್ನೂ ನಿಲ್ಲಿಸಿದೆ. ಕಳೆದ ವರ್ಷ ಇಡೀ ದೇಶಕ್ಕೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲು ಅವಕಾಶ ನೀಡಲಾಯಿತು. ಆದರೆ ಕರ್ನಾಟಕದಲ್ಲಿ ಮಾತ್ರ 41 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ಈ ನೀತಿಯಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ,” ಎಂದರು.

ಅವರು ಮತ್ತೊಂದು ಅಂಶವನ್ನು ಎತ್ತಿ ಹಿಡಿದು, ಎಥನಾಲ್ ಖರೀದಿಯ ವಿಷಯದಲ್ಲೂ ಕೇಂದ್ರದ ತಾರತಮ್ಯ ಧೋರಣೆ ಸ್ಪಷ್ಟವಾಗಿದೆ ಎಂದರು. “ಕರ್ನಾಟಕದಲ್ಲಿ 270 ಕೋಟಿ ಲೀಟರ್ ಉತ್ಪಾದನಾ ಸಾಮರ್ಥ್ಯವಿದ್ದರೂ, 2024–25 ರಲ್ಲಿ ಕೇವಲ 47 ಕೋಟಿ ಲೀಟರ್ ಖರೀದಿಗೆ ಮಾತ್ರ ಹಂಚಿಕೆ ನೀಡಲಾಗಿದೆ. ಇದು ರಾಜ್ಯದ ರೈತರ ಬದುಕಿನೊಂದಿಗೆ ಆಡುತ್ತಿರುವ ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ನಿದರ್ಶನವಾಗಿದೆ,” ಎಂದು ಸಿದ್ದರಾಮಯ್ಯ ಟೀಕಿಸಿದರು.

Leave a Reply

Your email address will not be published. Required fields are marked *

You may have missed